ಸೂಕ್ಷ್ಮಾಣುಜೀವಿಗಳಿಂದ ತಯಾರಿಸಿದ ಗೊಬ್ಬರಕ್ಕೆ ಜೈವಿಕ ಗೊಬ್ಬರವೆಂದು ಕರೆಯುತ್ತಾರೆ. ಇವುಗಳನ್ನು ಭೂಮಿಗೆ ಹಾಕುವುದರಿಂದ ವಾತಾವರಣದಲ್ಲಿರುವ ಸಾರಜನಕವನ್ನು ಸ್ಥಿರೀಕರಿಸುತ್ತವೆ ಮತ್ತು ರಂಜಕವನ್ನು ಕರಗಿಸಿ ಸಸ್ಯಕ್ಕೆ ಒದಗಿಸುತ್ತವೆ. ಇದರಿಂದ ಸಸ್ಯದ ಬೆಳವಣಿಗೆ ಮತ್ತು ಇಳುವರಿ ಹೆಚ್ಚಾಗಲು ನೆರವಾಗುತ್ತವೆ. ಕೃಷಿಗೆ ಉಪಯುಕ್ತವಾದ ಈ ಸೂಕ್ಷ್ಮಾಣು ಜೀವಿಗಳಿಂದ ಕೂಡಿದ ಜೈವಿಕ ಗೊಬ್ಬರಗಳನ್ನು ಯಾವುದೇ ಕಾರಣಕ್ಕೂ ರಾಸಾಯನಿಕ ರಸ ಗೊಬ್ಬರಗಳು ಹಾಗೂ ಕ್ರಿಮಿ ಕೀಟ ನಾಶಕಗಳೊಂದಿಗೆ ಮಿಶ್ರ ಮಾಡಿ ಬಳಸಬಾರದು. ಜೈವಿಕ ಗೊಬ್ಬರಗಳು ಸಾವಯವ ಕೃಷಿಯ ಚಕ್ರಗಳಂತಿದ್ದು ಬೆಳೆಯ ಸಮಗ್ರ ಪೋಷಕಾಂಶ ನಿರ್ವಹಣೆಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ. ಜೊತೆಗೆ ಜೈವಿಕ ಗೊಬ್ಬರಗಳು ಕೆಳಗಿನಂತೆ ಉಪಯುಕ್ತತೆ ಹೊಂದಿವೆ.
1. ಕಡಿಮೆ ಖರ್ಚಿನಲ್ಲಿ ಗೊಬ್ಬರವನ್ನು ಬೆಳೆಗೆ ಒದಗಿಸುತ್ತವೆ.
2 .ಮಣ್ಣಿನಲ್ಲಿ ಸಸ್ಯಕ್ಕೆ ಸಾಲದಿರುವ ಲಘು ಪೋಷಕಾಂಶಗಳನ್ನು ಒದಗಿಸಲು ಸಹಾಯ ಮಾಡುತ್ತವೆ.
3. ಬೆಳೆ ಬೆಳವಣಿಗೆ ಪ್ರಚೋದಕಗಳನ್ನು ಮತ್ತು ಬೆಳೆಗೆ ಬೇಕಾಗುವ ಜೀವಸತ್ವಗಳನ್ನು ಉತ್ಪತ್ತಿ ಮಾಡಿ ಬೆಳೆಗೆ ಒದಗಿಸಿ ಉತ್ಪಾದನೆಯನ್ನು ಶೇ. 15-20 ರಷ್ಟು ಹೆಚ್ಚಿಸುತ್ತವೆ.
4. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಮತ್ತು ಸುಸ್ಥಿರವಾಗಿಡಲು ಸಹಾಯ ಮಾಡುತ್ತವೆ.
ವಿವಿಧ ಬೆಳೆಗಳಿಗೆ ಜೈವಿಕ ಗೊಬ್ಬರಗಳ ಆಯ್ಕೆ ಮತ್ತು ಬಳಸುವ ವಿಧಾನ
ಸಹಜೀವನದಿಂದ ಸಾರಜನಕವನ್ನು ಸ್ಥಿರೀಕರಿಸುವ ಜೈವಿಕ ಗೊಬ್ಬರಗಳು
1. ಅಜೋಲ
ನೀರಿನಲ್ಲಿ ಬೆಳೆಯುವ ಈ ಝರಿ ಸಸ್ಯದ ಎಲೆಯ ಕೆಳಭಾಗದಲ್ಲಿ ಸಣ್ಣ ರಂಧ್ರಗಳಿದ್ದು ಅವುಗಳಲ್ಲಿ ಅನಬೀನಾ ಎಂಬ ನೀಲಿ ಹಸಿರು ಪಾಚಿಗಳು ಅಡಕವಾಗಿದ್ದು ಇವು ವಾಯುಮಂಡಲದಲ್ಲಿರುವ ಸಾರಜನಕವನ್ನು ಹೀರಿ ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಪಡೆದಿರುತ್ತವೆ. ಅಜೋಲವನ್ನು ಬತ್ತದ ಗದ್ದೆಯಲ್ಲಿ ಬೆಳೆಯುವುದರಿಂದ ಸಾರಜನಕ ಮತ್ತು ಇತರ ಪೋಷಕಾಂಶಗಳು ಹಾಗೂ ಹೆಚ್ಚಿನ ಹಸಿರೆಲೆ ಗೊಬ್ಬರವನ್ನು ಭೂಮಿಗೆ ಸೇರಿಸಿದಂತಾಗುತ್ತದೆ. ಇದನ್ನು ಗೊಬ್ಬರವಾಗಿ ತರಕಾರಿ, ಹೂವಿನ ಗಿಡ ಮತ್ತು ಇತರೆ ಅಲಂಕಾರ ಸಸ್ಯಗಳಲ್ಲಿ ಬಳಸಬಹುದು. ಇದನ್ನು ಕಾಂಪೋಸ್ಟ್ ತಯಾರಿಕೆಯಲ್ಲಿ ಬಳಸುವುದರಿಂದ ಸಂಪದ್ಭರಿತ ಗೊಬ್ಬರವನ್ನು ಪಡೆಯಬಹುದು. ಹೈನುರಾಸುಗಳಿಗೆ ಬೇಕಾದ ಅವಶ್ಯಕ ಪೋಷಕಾಂಶಗಳೂ ಅಜೋಲದಲ್ಲಿರುವುದರಿಂದ ಪರ್ಯಾಯ ಪ್ರಾಣಿ ಆಹಾರವಾಗಿ ಅಂದರೆ ಪಶುಸಂಗೋಪನೆ, ಕೋಳಿಸಾಕಣೆ, ಹಂದಿಸಾಕಣೆ, ಮೀನುಗಾರಿಕೆಯಲ್ಲಿ ಬಳಕೆ ಮಾಡಬಹುದಾಗಿ ಸಂಶೋಧನೆಗಳಿಂದ ತಿಳಿದುಬಂದಿದೆ. ಅಜೋಲದಲ್ಲಿರುವ ಪೋಷಕಾಂಶಗಳು (ಶೇಕಡಾ) ಸಾರಜನಕ 4.0-6.0, ರಂಜಕ 0.5-0.6, ಪೊಟ್ಯಾಷ್ 3.0-6.7, ಸುಣ್ಣ 0.4-1.0, ಮೆಗ್ನೀಷಿಯಂ 0.5, ಮ್ಯಾಂಗನೀಸ್ 0.11-0.16, ಕಬ್ಬಿಣ 0.06-0.16, ಬೂದಿ 6.0-10.0, ಪಿಷ್ಟ 5.0-6.0, ಕೊಬ್ಬು 5.0, ಕಚ್ಚಾ ಸಸಾರಜನಕ 24.0-26.0 ಮತ್ತು ಕಚ್ಚಾ ನಾರು 6.0.
2. ರೈಜೋಬಿಯಂ
ರೈಜೋಬಿಯಂ ಮಣ್ಣಿನಲ್ಲಿ ವಾಸಿಸುವ ಸೂಕ್ಷ್ಮಾಣು ಜೀವಿಯಾಗಿದ್ದು ಎಲ್ಲ ದ್ವಿದಳ ಧಾನ್ಯದ ಬೇರುಗಳಲ್ಲಿ ಒಳಹೊಕ್ಕು ಬೇರುಗಳ ಮೇಲೆ ಗಂಟುಗಳನ್ನು ಉತ್ಪತ್ತಿ ಮಾಡಿ ಅದರಲ್ಲಿ ನೆಲೆಸಿ, ಸಹಜೀವನ ಪದ್ಧತಿಯಿಂದ ವಾಯು ಮಂಡಲದಲ್ಲಿರುವ ಸಾರಜನಕವನ್ನು ಸ್ಥಿರೀಕರಿಸಿ ಗಿಡದ ಬೆಳವಣಿಗೆಗೆ ಒದಗಿಸುತ್ತದೆ. ಈ ಜೈವಿಕ ಗೊಬ್ಬರವನ್ನು ತೊಗರಿ, ಕಡಲೆ, ಅಲಸಂದೆ, ಉದ್ದು, ಹೆಸರು, ಹುರಳಿ, ನೆಲಗಡಲೆ, ಸೋಯಾಅವರೆ ಹಾಗೂ ಮೇವಿನ ಬೆಳೆಗಳಿಗೆ ಉಪಯೋಗಿಸಬಹುದು. ಇದರ ಬಳಕೆಯಲ್ಲಿ ಗಮನದಲ್ಲಿಡಬೇಕಾದ ಅತಿ ಮುಖ್ಯವಾದ ಅಂಶವೆಂದರೆ ಬೆಳೆಗೆ ಅನುಗುಣವಾದ ರೈಜೋಬಿಯಂ ತಳಿಯನ್ನು ಉಪಯೋಗಿಸುವುದು ಹಾಗೂ ಶೇಖರಣಾ ಅವಧಿಯೊಳಗಿರುವ ರೈಜೋಬಿಯಂ ಜೈವಿಕ ಗೊಬ್ಬರವನ್ನು ಬಳಸುವುದು. ಈ ಸೂಕ್ಷ್ಮಾಣುಜೀವಿಗೆ ಇತರೆ ಕೃಷಿಗೆ ಉಪಯುಕ್ತವಾದ ಸೂಕ್ಷ್ಮಾಣು ಜೀವಿಗಳೊಂದಿಗೆ ಹೊಂದಿಕೊಂಡು ಬೆಳೆಯಬಲ್ಲ ಸಾಮರ್ಥ್ಯವಿರುತ್ತದೆ. ರೈಜೋಬಿಯಂ ಜೈವಿಕ ಗೊಬ್ಬರವನ್ನು ಉಪಯೋಗಿಸುವುದರಿಂದ ಶೇ. 15-20 ರಷ್ಟು ಹೆಚ್ಚು ಬೆಳೆ ಇಳುವರಿ ಪಡೆಯಬಹುದು ಮತ್ತು ಸುಮಾರು 20-25 ಕಿ.ಗ್ರಾಂ ಸಾರಜನಕ ರಸಗೊಬ್ಬರ ಹಾಕುವಿಕೆಯನ್ನು ಮಿತಗೊಳಿಸಬಹುದು. ರೈಜೋಬಿಯಂ ಉಪಚರಣೆಯಿಂದ ಬೇಳೆ ಕಾಳುಗಳಲ್ಲಿ ಹೆಚ್ಚಿನ ಪ್ರೋಟೀನ್ ಹಾಗೂ ಎಣ್ಣೆ ಕಾಳುಗಳಲ್ಲಿ ಎಣ್ಣೆಯ ಅಂಶ ಹೆಚ್ಚಿರುವುದು ಕಂಡು ಬಂದಿದೆ. ಎಕರೆಗೆ ಬೇಕಾದ ದ್ವಿದಳ ಧಾನ್ಯ ಬಿತ್ತನೆ ಬೀಜಕ್ಕೆ 200 ಗ್ರಾಂ. ಜೀವಾಣುವನ್ನು ಲೇಪಿಸಿ ಬಿತ್ತುವುದು.
ವಿವಿಧ ಬೆಳೆಗಳಲ್ಲಿ ರೈಜೋಬಿಯಂನಿಂದ ಸ್ಥಿರೀಕರಿಸಲ್ಪಡಬಹುದಾದ ಸಾರಜನಕದ ಪ್ರಮಾಣ (ಕಿ.ಗ್ರಾಂ/ಹೆ)
ಬೆಳೆಗಳು ಸ್ಥಿರೀಕರಿಸಲ್ಪಡುವ ಸಾರಜನಕ (ಕಿ.ಗ್ರಾಂ./ಹೆ)
ತೊಗರಿ 16-25
ಕಡಲೆ 19-108
ಅಲಸಂದಿ 30-96
ಕುದುರೆ ಮಸಾಲೆ ಸೊಪ್ಪು 65-120
ನೆಲಗಡಲೆ 12-52
ಹೆಸರು / ಉದ್ದು 50-55
ಸೋಯಾ ಅವರೆ 50-70
ಮೂಲ: ಸುಧಾರಿತ ಬೇಸಾಯ ಪದ್ಧತಿಗಳ ಪೂರಕ ಕೈಪಿಡಿ
ಸಹಜೀವನವಿಲ್ಲದೆ ಸಾರಜನಕವನ್ನು ಸ್ಥಿರೀಕರಿಸುವ ಜೈವಿಕ ಗೊಬ್ಬರಗಳು
1. ಅಜೋಸ್ಪೈರಿಲಂ
ಅಜೊಸ್ಪೈರಿಲಂ ಏಕಾಣುಜೀವಿಯು ಬೆಳೆಯ ಬೇರಿನ ಸಮೀಪ ಹಾಗೂ ಬೇರುಗಳಲ್ಲಿ ಪ್ರವೇಶಿಸಿ ಸಾರಜನಕ ಸ್ಥಿರೀಕರಣ ಮಾಡುತ್ತದೆ. ಈ ಸೂಕ್ಷ್ಮಾಣು ಜೀವಿಯು ಸ್ವಲ್ಪ ಆಮ್ಲಜನಕವಿದ್ದರೂ ಬದುಕುಳಿಯಬಲ್ಲದು. ಇದನ್ನು ಎಲ್ಲ ಏಕದಳ ಧಾನ್ಯಗಳು, ಎಣ್ಣೆಕಾಳು ಸಸ್ಯಗಳಾದ ಸೂರ್ಯಕಾಂತಿ ಮುಂತಾದವು, ತೃಣ ಧಾನ್ಯ, ತರಕಾರಿ ಬೆಳೆಗಳು, ಹಿಪ್ಪು ನೇರಳೆ, ಹುಲ್ಲು ಮತ್ತು ಅಲಂಕಾರಿಕ ಗಿಡಗಳಲ್ಲಿ ಬಳಸಬಹುದು. ಈ ಜೈವಿಕ ಗೊಬ್ಬರದ ಬಳಕೆಯಿಂದ ಸುಮಾರು 20-25 ಕಿ.ಗ್ರಾಂ ಸಾರಜನಕ ರಸಗೊಬ್ಬರ ಹಾಕುವಿಕೆಯನ್ನು ಮಿತಗೊಳಿಸಬಹುದಲ್ಲದೆ ಶೇ. 15-20 ರಷ್ಟು ಹೆಚ್ಚು ಇಳುವರಿ ಪಡೆಯಬಹುದಾಗಿದೆ. ಈ ಸೂಕ್ಷ್ಮಾಣುಜೀವಿಯು ನೀರಾವರಿ ಬೆಳೆಗಳಾದ ಬತ್ತ ಮತ್ತು ಕಬ್ಬಿನ ಬೆಳೆಗೆ ಅತಿ ಸೂಕ್ತ.
2. ಅಜಟೋಬ್ಯಾಕ್ಟರ್
ಈ ಜೈವಿಕ ಗೊಬ್ಬರವನ್ನು ಎಲ್ಲ ಏಕದಳ ಧಾನ್ಯಗಳಾದ ರಾಗಿ, ಬತ್ತ, ಜೋಳ, ಮುಸುಕಿನ ಜೋಳ, ಗೋಧಿ, ತರಕಾರಿ ಬೆಳೆಗಳು, ಅಲಂಕೃತ ಹೂ ಗಿಡಗಳು, ಹಣ್ಣಿನ ಗಿಡಗಳಾದ ಮಾವು, ಬಾಳೆ, ಹಲಸು, ಅಡಿಕೆ, ತೆಂಗು ಮುಂತಾದವು ಹಾಗೂ ಪ್ಲಾಂಟೇಷನ್ ಬೆಳೆಗಳಾದ ರಬ್ಬರ್, ಟೀ, ಕಾಫೀ, ಕೋಕೋ ಇತ್ಯಾದಿ ಮತ್ತು ವಾಣಿಜ್ಯ ಬೆಳೆಗಳಾದ ಕಬ್ಬು, ತಂಬಾಕು, ಮೆಣಸಿನ ಕಾಯಿ, ಹತ್ತಿ ಇತ್ಯಾದಿ ಬೆಳೆಗಳಿಗೆ ಬಳಸಬಹುದು. ಈ ಸೂಕ್ಷ್ಮಾಣು ಜೀವಿಯ ವಿಶಿಷ್ಟತೆಯೆಂದರೆ ಸಾರಜನಕ ಸ್ಥಿರೀಕರಣದ ಜೊತೆಗೆ ಸಸ್ಯದ ಬೆಳವಣಿಗೆಗೆ ಬೇಕಾದ ಬೆಳವಣಿಗೆ ಕಾರಕಗಳಾದ ಇಂಡೋಲ್ಅಸಿಟಿಕ್ಆಮ್ಲ, ಜಿಬ್ಬರ್ಲಿಕ್ ಆಮ್ಲ, ಸೈಟೋಕೈನಿನ್ ಮತ್ತು ಜೀವಸತ್ವಗಳನ್ನು ಒದಗಿಸುತ್ತದೆ ಹಾಗೂ ಬೇರುಕೊಳೆಕಾರಕ ರೋಗಗಳನ್ನು ತಡೆಗಟ್ಟುವಲ್ಲಿ ಸಹಾಯಕವಾಗಿದೆ. ಈ ಜೈವಿಕ ಗೊಬ್ಬರದ ಬಳಕೆಯಿಂದ ಸುಮಾರು 20-25 ಕಿ.ಗ್ರಾಂ. ಸಾರಜನಕ ರಸಗೊಬ್ಬರ ಬಳಕೆಯನ್ನು ಮಿತಿಗೊಳಿಸಬಹುದು ಹಾಗೂ 20-30 ರಷ್ಟು ಹೆಚ್ಚಿನ ಫಸಲನ್ನು ಪಡೆಯಬಹುದು.
3. ಗ್ಲುಕನೋಬ್ಯಾಕ್ಟರ್
ಈ ಸೂಕ್ಷ್ಮಾಣು ಜೀವಿಯು ಸಕ್ಕರೆಯುಕ್ತ ಬೆಳೆಗಳಾದ ಕಬ್ಬು, ಗೆಣಸು, ಮರಗೆಣಸು, ಬೀಟ್ರೂಟ್ ಇತ್ಯಾದಿ ಬೆಳೆಗಳಲ್ಲಿ ಬೇರು, ಎಲೆ ಮತ್ತು ಕಾಂಡದಲ್ಲಿ ನೆಲೆಸಿ ವಾಯುಮಂಡಲದಲ್ಲಿರುವ ಸಾರಜನಕವನ್ನು ಹೀರಿ ಸಸ್ಯದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಜೀವಾಣುವನ್ನು ಕಬ್ಬಿನಲ್ಲಿ ಬಳಸುವುದರಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದಾಗಿದ್ದು ಕಬ್ಬಿನಲ್ಲಿ ಕಾಂಡದ ಕೆಂಪು ಕೊಳೆಯುವಿಕೆಯನ್ನು ತಡೆಗಟ್ಟುವಲ್ಲಿ ಸಹಾಯಕವಾಗಿದೆ ಹಾಗೂ ಸಾರಜನಕಯುಕ್ತ ರಾಸಾಯನಿಕ ಗೊಬ್ಬರದ ಬಳಕೆಯನ್ನು ಮಿತಿಗೊಳಿಸಬಹುದು.
4. ನೀಲಿ ಹಸಿರು ಪಾಚಿ
ಈ ಜೀವಾಣು ಗೊಬ್ಬರವು ಬತ್ತ ಬೆಳೆಯುವ ಪ್ರದೇಶಗಳಿಗೆ ಅತಿ ಸೂಕ್ತ. ಇದು ವಾಯುಮಂಡಲದಲ್ಲಿರುವ ಸಾರಜನಕವನ್ನು ಹೀರಿ ಸಸ್ಯದ ಬೆಳವಣಿಗೆಗೆ ಒದಗಿಸಿ ಬತ್ತದ ಇಳುವರಿಯನ್ನು ಶೇಕಡಾ ೧೫-೧೮ ರಷ್ಟು ಹೆಚ್ಚಿಸುತ್ತದೆ ಹಾಗೂ ಶೇಕಡಾ ೧೨-೧೫ ರಷ್ಟು ಸಾರಜನಕಯುಕ್ತ ರಸಗೊಬ್ಬರ ಹಾಕುವಿಕೆಯನ್ನು ಮಿತಗೊಳಿಸಬಹುದು. ಮಣ್ಣಿನ ರಸಸಾರ ೬.೫-೭.೫ ಹಾಗೂ ಉಷ್ಣತೆ ೩೦-೩೫೦ . ಅತಿ ಸೂಕ್ತ. ಇದರ ಬೆಳವಣಿಗೆಗೆ ಸೂರ್ಯನ ಬೆಳಕು ಮತ್ತು ಸ್ವಲ್ಪಮಟ್ಟದ ರಂಜಕ ಅಗತ್ಯವಿರುತ್ತದೆ. ಇವುಗಳಲ್ಲಿ ಮುಖ್ಯವಾಗಿ ಟಾಲಿಪೋತ್ರಿಕ್ಸ್, ಅನಬೀನಾ ಮತ್ತು ನಾಸ್ಟಾಕ್ ನೀಲಿ ಹಸಿರು ಪಾಚಿ ಪ್ರಭೇದಗಳು ಬತ್ತದ ಗದ್ದೆಯಲ್ಲಿ ಫಲಪ್ರದವಾಗಿ ಕೆಲಸ ಮಾಡುತ್ತವೆ. ಎಕರೆಗೆ ೧೦ ಕಿ.ಗ್ರಾಂ ನೀಲಿ ಹಸಿರು ಪಾಚಿಯನ್ನು ಸತತವಾಗಿ 3-4 ಬಾರಿ ಬತ್ತದ ಬೆಳೆಗೆ ತಪ್ಪದೆ ಒದಗಿಸಿದಾಗ ಮುಂದೆ ಇದನ್ನು ಹಾಕುವ ಅವಶ್ಯಕತೆ ಕಂಡು ಬರುವುದಿಲ್ಲ.
ರಂಜಕವನ್ನು ಕರಗಿಸುವ ಜೈವಿಕ ಗೊಬ್ಬರಗಳು
ಇವು ಮಣ್ಣಿನಲ್ಲಿ ಘನೀಕೃತಗೊಂಡಿರುವ ರಂಜಕವನ್ನು ವಿಭಜನೆಗೊಳಿಸಿ ನೀರಿನಲ್ಲಿ ಕರಗುವಂತೆ ಮಾಡಿ ಸಸ್ಯಗಳಿಗೆ ಒದಗಿಸುತ್ತವೆ. ಈ ಜೀವಾಣುಗಳು ಗ್ಲುಕೋನಿಕ್, ಸಿಟ್ರಿಕ್, ಅಸಿಟಿಕ್ ಇತ್ಯಾದಿ ಸಾವಯವ ಆಮ್ಲಗಳನ್ನು ಉತ್ಪಾದಿಸುತ್ತವೆ. ಬ್ಯಾಕ್ಟೀರಿಯಾಗಳಾದ ಬ್ಯಾಸಿಲಸ್ ಮತ್ತು ಸೂಡೋಮೋನಾಸ್ ಪ್ರಭೇದಗಳು ಹಾಗೂ ಪೆನ್ಸೀಲಿಯಂ ಮತ್ತು ಆಸ್ಪರ್ಜಿಲ್ಲಸ್ ಶಿಲೀಂಧ್ರಗಳು ಈ ಗುಂಪಿಗೆ ಸೇರಿವೆ. ಸ್ಟ್ರೆಪ್ಟೊಮೈಸಿಟ್ ಪ್ರಭೇದಗಳೂ ಸಹ ಈ ಕಾರ್ಯವನ್ನು ನಿರ್ವಹಿಸುತ್ತವೆ. ಇದನ್ನು ಎಲ್ಲ ಏಕದಳ, ದ್ವಿದಳ ಧಾನ್ಯಗಳ ಬೆಳೆಗಳಲ್ಲಿ ಬಳಸಬಹುದು. ಈ ಸೂಕ್ಷ್ಮಾಣುಜೀವಿಯ ಬಳಕೆಯಿಂದ ಶೇಕಡಾ 15-30 ರಷ್ಟು ಹೆಚ್ಚಿನ ಬೆಳೆ ಇಳುವರಿಯನ್ನು ಪಡೆಯಬಹುದಲ್ಲದೇ, ರಂಜಕ ರಸಗೊಬ್ಬರ ಹಾಕುವಿಕೆಯನ್ನು ಶೇಕಡಾ 20-25ರಷ್ಟು ಮಿತಗೊಳಿಸಬಹುದು.
ಕರಗಿದ ರಂಜಕ ಒದಗಿಸುವ ಸೂಕ್ಷ್ಮಾಣುಜೀವಿಗಳು
ಮೈಕೊರೈಜಾ
ಈ ಶಿಲೀಂಧ್ರವು ಗಿಡಕ್ಕೆ ಕರಗಿದ ರೂಪದಲ್ಲಿರುವ ರಂಜಕವನ್ನು ನೇರವಾಗಿ ಒದಗಿಸುವುದಲ್ಲದೆ ಇತರ ಲಘು ಪೋಷಕಾಂಶಗಳಾದ ತಾಮ್ರ, ಕಬ್ಬಿಣ, ಸತು, ಅಲ್ಯುಮಿನಿಯಂ, ಮೆಗ್ನೀಷಿಯಂ, ಮ್ಯಾಂಗನೀಸ್, ಗಂಧಕವನ್ನು ಗಿಡಕ್ಕೆ ಒದಗಿಸುವಲ್ಲಿ ಸಹಾಯಕವಾಗಿದೆ ಹಾಗೂ ಗಿಡದಲ್ಲಿ ರೋಗ ನಿರೋಧಕವನ್ನು ಪ್ರಚೋದಿಸಿ ಬೇರು ಕೊಳೆಕಾರಕ ರೋಗಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದೆ.
ಸಸ್ಯ ಬೆಳವಣಿಗೆಕಾರಕ ಬೇರು ಪರಿಸರದ ಸೂಕ್ಷ್ಮಾಣುಜೀವಿಗಳು
ಈ ಸೂಕ್ಣ್ಮಾಣುಜೀವಿಗಳನ್ನು ಎಲ್ಲಾ ಬೆಳೆಗಳಲ್ಲಿ ಬಳಸಬಹುದು. ಇವು ಎರಡು ರೀತಿಯಲ್ಲಿ ಕಾರ್ಯನಿರ್ವಹಿಸಬಲ್ಲವು. ಮೊದಲನೆಯದಾಗಿ ಸಸ್ಯ ಬೆಳವಣಿಗೆಗೆ ಬೇಕಾದ ಪೋಷಕಾಂಶಗಳು, ಬೆಳವಣಿಗೆಕಾರಕಗಳಾದ ಇಂಡೋಲ್ ಅಸಿಟಿಕ್ ಆಮ್ಲ, ಜಿಬ್ಬರ್ಲಿಕ್ ಆಮ್ಲ, ಇತರೆ ಬೆಳೆ ಪ್ರಚೋದಕ ವಸ್ತುಗಳು ಹಾಗೂ ಜೀವಸತ್ವಗಳನ್ನು ಗಿಡಕ್ಕೆ ಒದಗಿಸುತ್ತವೆ ಹಾಗೂ ಎರಡನೆಯದಾಗಿ ಕೆಲವೊಂದು ಸಸ್ಯ ರೋಗಗಳನ್ನು ಉಂಟು ಮಾಡುವ ಸೂಕ್ಷ್ಮಾಣುಜೀವಿಗಳನ್ನು ತಡೆಗಟ್ಟುವಲ್ಲಿ ಫಲಪ್ರದವಾಗಿ ಕೆಲಸಮಾಡುತ್ತವೆ ಮತ್ತು ಹೆಚ್ಚಿನ ಇಳುವರಿ ಪಡೆಯುವಲ್ಲಿ ಸಹಾಯಕವಾಗಿವೆ. ಈ ಗುಂಪಿಗೆ ಸೇರಿದ ಒಳ್ಳೆಯ ಉದಾಹರಣೆಗಳೆಂದರೆ ಸುಡೋಮೋನಾಸ್ ಪ್ಲೂರೊಸೆನ್ಸ್ ಮತ್ತು ಸುಡೋಮೋನಾಸ್ ಪ್ಯುಟಿಡಾ.
ಟ್ರೈಕೋಡರ್ಮ
ಇತ್ತೀಚಿನ ದಿನಗಳಲ್ಲಿ ಈ ಶಿಲೀಂಧ್ರದ ಬಳಕೆಯು ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಹೆಚ್ಚಿನ ಮಹತ್ವವನ್ನು ಪಡೆಯುತ್ತಿದೆ. ಈ ಶಿಲೀಂಧ್ರವು ನಾಲ್ಕು ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಸಸ್ಯ ಬೆಳವಣಿಗೆಯ ಪೋಷಣೆ, ರೋಗ ನಿರೋಧಕ ಅದರಲ್ಲೂ ಸೊರಗು ರೋಗ ತಡೆಗಟ್ಟುವಿಕೆ, ಭೂಮಿಯಲ್ಲಿ ಸಾವಯವ ಅಂಶವನ್ನು ಕೊಳೆಸುವಿಕೆ ಹಾಗೂ ಮಣ್ಣಿನಲ್ಲಿ ಕರಗದ ರೂಪದಲ್ಲಿರುವ ರಂಜಕವನ್ನು ಕರಗಿಸುವಿಕೆ. ಈ ಶಿಲೀಂಧ್ರವನ್ನು ಶೇಂಗಾ, ಏಲಕ್ಕಿ, ಬಾಳೆ, ಸೋಯಾ ಅವರೆ ಇತ್ಯಾದಿ ಬೆಳೆಗಳಲ್ಲಿ ಬಳಸುವುದರಿಂದ ಸೊರಗು ರೋಗವನ್ನು ತಡೆಗಟ್ಟಬಹುದು ಹಾಗೂ ಉತ್ತಮವಾದ ಬೆಳೆ ಇಳುವರಿಯನ್ನು ಪಡೆಯಬಹುದು.
ಜೈವಿಕ ಗೊಬ್ಬರ ಉಪಯೋಗಿಸುವ ವಿಧಾನಗಳು
ಬೀಜೋಪಚಾರ ಕ್ರಮ
70 ಗ್ರಾಂ ಬೆಲ್ಲ ಅಥವಾ ಸಕ್ಕರೆ, 250 ಮಿ.ಲೀ. ನೀರಿನಲ್ಲಿ ಕರಗಿಸಿ 15-20 ನಿಮಿಷಗಳ ಕಾಲ ಕುದಿಸಿ, ತಣ್ಣಗೆ ಮಾಡಿ. ಈ ದ್ರಾವಣಕ್ಕೆ 200 ಗ್ರಾಂ ಜೀವಾಣುಗೊಬ್ಬರವನ್ನು ಹಾಕಿ ಕಲಸಿ, ಒಂದು ಎಕರೆಗೆ ಬೇಕಾಗುವ ಬಿತ್ತನೆ ಬೀಜದ (ಮಧ್ಯಮ ಗಾತ್ರದ ಸುಮಾರು 10 ಕಿ.ಗ್ರಾಂ ಬೀಜಕ್ಕೆ) ಮೇಲೆ ಸುರಿದು ಪ್ರತಿ ಬೀಜಕ್ಕೂ ಸಮನಾಗಿ ಅಂಟುವಂತೆ ಮಾಡಿ, ಬಟ್ಟೆ ಅಥವಾ ಗೋಣಿಚೀಲದ ಮೇಲೆ ಹರಡಿ ನೆರಳಿನಲ್ಲಿ ಒಣಗಿಸಿದ ತಕ್ಷಣ ಬಿತ್ತನೆ ಮಾಡುವುದು. 1 ಕಿ.ಗ್ರಾಂ ಬೀಜಕ್ಕೆ ಸುಮಾರು 30-50 ಮಿ.ಲೀ. ಅಂಟು ಬೇಕಾಗುತ್ತದೆ. ಬೀಜದ ಗಾತ್ರ ಹಾಗೂ ಉಪಯೋಗಿಸುವ ಪ್ರಮಾಣವನ್ನಾಧರಿಸಿ ಅಗತ್ಯಕ್ಕನುಗುಣವಾಗಿ ಜೈವಿಕ ಗೊಬ್ಬರ ಬಳಸುವುದು.
ನೇರವಾಗಿ ಮಣ್ಣಿಗೆ ಹಾಕುವ ವಿಧಾನ
ಒಂದು ಎಕರೆಗೆ ಬೇಕಾಗುವಷ್ಟು ಪುಡಿ ರೂಪದ (4 ಕಿ.ಗ್ರಾಂ) ಜೈವಿಕ ಗೊಬ್ಬರವನ್ನು (80 ಕಿ.ಗ್ರಾಂ) ಕೊಟ್ಟಿಗೆ ಗೊಬ್ಬರದೊಂದಿಗೆ ಮಿಶ್ರ ಮಾಡಿ ಬಿತ್ತನೆ ಸಾಲುಗಳಲ್ಲಿ ಹಾಕುವುದು.
ಸಸ್ಯ ಬೇರುಗಳಿಗೆ ಉಪಚರಿಸುವ ವಿಧಾನ
1 ಕಿ.ಗ್ರಾಂ. ಜೀವಾಣು ಗೊಬ್ಬರವನ್ನು 5 ಲೀಟರ್ ನೀರಿನಲ್ಲಿ ಕಲಸಿ. ಈ ದ್ರಾವಣದಲ್ಲಿ ಪೈರಿನ ಬೇರನ್ನು 30 ನಿಮಿಷಗಳ ಕಾಲ ನೆನೆಸಿ ನಂತರ ಬೆಳೆಯ ಪ್ರದೇಶದಲ್ಲಿ ನಾಟಿ ಮಾಡುವುದು.
ಜೈವಿಕ ಗೊಬ್ಬರನ್ನು ಉಪಯೋಗಿಸುವ ಮೊದಲು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು
1. ಜೈವಿಕ ಗೊಬ್ಬರವನ್ನು ತಂಪು ಮಾಡಿದ ಅಂಟುದ್ರಾವಣದಲ್ಲೇ ಮಿಶ್ರ ಮಾಡಬೇಕು.
2. ನೇರ ಬಿಸಿಲು, ಬೆಂಕಿಯ ಶಾಖ ಮತ್ತು ಅತಿ ತಂಪಾದ ಸ್ಥಳದಲ್ಲಿ ಜೈವಿಕ ಗೊಬ್ಬರವನ್ನು ಶೇಖರಿಸಿಡಬಾರದು.
3. ಲಕೋಟೆಯ ಮೇಲೆ ನಮೂದಿಸಿದ ಬೆಳೆಗೆ ಮಾತ್ರ ಉಪಯೋಗಿಸಬೇಕು.
4. ಅವಧಿ ಮುಗಿಯುವುದರೊಳಗೆ ಜೈವಿಕ ಗೊಬ್ಬರವನ್ನು ಬಳಸಿರಿ.
5. ಜೈವಿಕ ಗೊಬ್ಬರವನ್ನು ಯಾವುದೇ ಕಾರಣಕ್ಕೂ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿಕೀಟನಾಶಕಗಳೊಂದಿಗೆ ಮಿಶ್ರ ಮಾಡಬಾರದು ಅಥವಾ ಜೊತೆಯಲ್ಲಿ ಬಳಸಬಾರದು
ಲೇಖಕರು: ಶ್ರೀ ಎಂ. ಆರ್. ಆನಂದ್, ಶ್ರೀ ಪಾಟೀಲ್ ರವೀಂದ್ರ ಎಸ್., ಡಾ. ಎಂ. ಹನುಮಂತಪ್ಪ ಮತ್ತು ಶ್ರೀ. ಕೆ.ವಿ. ಸುಧೀರ್ ಕಾಮತ್, ವಿಜ್ಞಾನಿಗಳು, ವಲಯ ಸಂಶೋಧನಾ ಕೇಂದ್ರ, ಬ್ರಹ್ಮಾವರ