VK
ಬಾಲಕಿಯ ಅತ್ಯಾಚಾರಿ-ಕೊಲೆಗಾರ ಬಾಗಲಕೋಟೆಯ ತಿಡ್ಕೆಗೆ ಜೀವದಾನ
* ಅಫ್ಜಲ್ ಗುರು ಕ್ಷಮಾದಾನ ಅರ್ಜಿ ಇತ್ಯರ್ಥವಿಲ್ಲ
* ಹಂತಕರು, ಅತ್ಯಾಚಾರಿಗಳಿಗೆ ಕ್ಷಮಾದಾನ
ಹೊಸದಿಲ್ಲಿ: ರಾಷ್ಟ್ರಪತಿ ಭವನವನ್ನು ತೊರೆಯುವ ದಿನ ಹತ್ತಿರ ಬರುತ್ತಿದ್ದಂತೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಕರುಣಾಮಯಿಯಾಗಿದ್ದಾರೆ. ಕರ್ನಾಟಕದ ಬಂಡು ಬಾಬುರಾವ್ ತಿಡ್ಕೆ ಸೇರಿದಂತೆ 35 ಅಪರಾಧಿಗಳ ಮರಣ ದಂಡನೆಯನ್ನು ಮಾಫಿ ಮಾಡಿ ದಾಖಲೆ ನಿರ್ಮಿಸಿದ್ದಾರೆ.
ಆದರೆ ಸಂಸತ್ ದಾಳಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನಿಂದ ಮರಣ ದಂಡನೆ ಶಿಕ್ಷೆ ತೀರ್ಪು ಪಡೆದಿರುವ ಕಾಶ್ಮೀರಿ ಉಗ್ರ ಅಫ್ಜಲ್ ಗುರು ಕಡತವನ್ನು 'ಪೆಂಡಿಂಗ್' ಪಟ್ಟಿಯಲ್ಲಿರಿಸಿದ್ದಾರೆ.
ರಾಷ್ಟ್ರಪತಿಯವರು ಮರಣದಂಡನೆಯನ್ನು ಜೀವಾವಧಿಗೆ ಇಳಿಸಿರುವ ಅಪರಾಧಿಗಳು ಸಾಮಾನ್ಯದವರೇನಲ್ಲ. ಸಾಮೂಹಿಕ ಹತ್ಯೆ, ಅಪಹರಣ, ಅತ್ಯಾಚಾರಗಳಂತಹ ಘೋರ ಕೃತ್ಯಗಳನ್ನು ಎಸಗಿದವರು. ಇವರಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ 17 ಮಂದಿಯನ್ನು ಒಮ್ಮೆಗೇ ಸಾಯಿಸಿದ್ದ ಪಿಯರಾ ಸಿಂಗ್, ಸರಬಜಿತ್ ಸಿಂಗ್, ಗುರುದೇವ್ ಸಿಂಗ್ ಮತ್ತು ಸತ್ನಾಮ್ ಸಿಂಗ್ ಕೂಡ ಸೇರಿದ್ದಾರೆ.
ಅಪ್ರಾಪ್ತ ಹೆಣ್ಮಕ್ಕಳನ್ನು ಅತ್ಯಾಚಾರ ಮಾಡಿ, ಕೊಲೆಗೈದ ತಮಿಳುನಾಡಿನ ಗೋಪಿ, ಮೋಹನ್, ಮಧ್ಯಪ್ರದೇಶದ ಸಂತೋಷ್, ಮೊಲಾಯಿ ರಾಮ್ ಮುಂತಾದವರಿಗೂ ಕ್ಷಮಾದಾನ ಸಿಕ್ಕಿದೆ. ಕರ್ನಾಟಕದ ಬಂಡು ಬಾಬುರಾವ್ ತಿಡ್ಕೆ, ಉತ್ತರ ಪ್ರದೇಶದ ಬುಂಟು, ರಾಜಸ್ಥಾನದ ಲಾಲ್ಚಂದ್, ಶಿವಲಾಲ್ ಕೂಡ ಮರಣ ದಂಡನೆಯಿಂದ ಪಾರಾಗಿ ಜೀವಾವಧಿ ಶಿಕ್ಷೆಗೆ ಇಳಿಸಲ್ಪಟ್ಟಿದ್ದಾರೆ.
ಯಾರೀತ ತಿಡ್ಕೆ?
ಕರ್ನಾಟಕದ ಬಾಗಲಕೋಟೆ ನಿವಾಸಿಯಾಗಿರುವ ಮರಾಠಿ ಭಾಷಿಗ ಬಂಡು ಬಾಬುರಾವ್ ತಿಡ್ಕೆ 12ರ ಹರೆಯದ ಶಾಲಾ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ದೋಷಿಯೆಂದು ಸಾಬೀತಾಗಿ ಸುಪ್ರೀಂ ಕೋರ್ಟ್ನಿಂದ ಮರಣ ದಂಡನೆ ಶಿಕ್ಷೆಯನ್ನು ಪಡೆದುಕೊಂಡಿದ್ದ.
ಇದಕ್ಕಿಂತಲೂ ಹೆಚ್ಚಾಗಿ ಈತ ಬಾಗಲಕೋಟೆಯ ಸದಾಶಿವ ಅಪ್ಪಣ್ಣ ಮಠದ ಸ್ವಾಮಿಯಾಗಿದ್ದ. ಆಗ ಅತನ ವಯಸ್ಸು 26. ಇಲ್ಲೇ ಪಕ್ಕದ ಶಾಲೆಯೊಂದರಿಂದ ಸಾವಿತ್ರಿ ಎಂಬ ಬಾಲಕಿಯನ್ನು ಅಪಹರಿಸಿದ್ದ ಸ್ವಾಮಿ ತಿಡ್ಕೆ, ತನ್ನ ಮಠದ ನೆಲ ಮಾಳಿಗೆಗೆ ಕೊಂಡೊಯ್ದು ಅತ್ಯಾಚಾರ ಎಸಗಿ, ಹತ್ಯೆಗೈದಿದ್ದ.
ನಂತರ ಬಾಲಕಿಯ ಶವವನ್ನು ಅಲ್ಲೇ ಬಿಟ್ಟಿದ್ದ ತಿಡ್ಕೆ ಸೀದಾ ಶಿರ್ಡಿಗೆ ಪರಾರಿಯಾಗಿದ್ದ. ಪೊಲೀಸರು ಅಲ್ಲೇ ಆತನನ್ನು ಬಂಧಿಸಿದ್ದರು.
ಈ ಪ್ರಕರಣದಲ್ಲಿ ಅಧೀನ ನ್ಯಾಯಾಲಯವು ತಿಡ್ಕೆಗೆ ವಿಧಿಸಿದ್ದ ಮರಣ ದಂಡನೆಯನ್ನು ಕರ್ನಾಟಕ ಹೈಕೋರ್ಟ್ 2006ರ ಫೆಬ್ರವರಿಯಲ್ಲಿ ಎತ್ತಿ ಹಿಡಿದಿತ್ತು.
ಪ್ರತಿಭಾ ದಾಖಲೆ...
ಮರಣ ದಂಡನೆ ಶಿಕ್ಷೆ ಪಡೆದುಕೊಂಡಿದ್ದ 35 ಮಂದಿ ಅಪರಾಧಿಗಳ ಶಿಕ್ಷೆಯನ್ನು ಜೀವಾವಧಿಗೆ ಇಳಿಸುವ ಮೂಲಕ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ದಾಖಲೆ ನಿರ್ಮಿಸಿದ್ದಾರೆ.
ಹಾಗೆಂದು ಅವರ ಬಳಿ ಬಂದ ಅರ್ಜಿಗಳು ಕೇವಲ 35 ಮಾತ್ರ ಎಂದು ಭಾವಿಸಬೇಕಿಲ್ಲ. ರಾಷ್ಟ್ರಪತಿಗಳು ಮೂರು ಅರ್ಜಿಗಳನ್ನು ತಿರಸ್ಕರಿಸಿದ್ದಾರೆ. ಕೆಲವು ಅರ್ಜಿಗಳನ್ನು ಕ್ಷಮಾದಾನಕ್ಕೆ ಪರಿಗಣಿಸಿಲ್ಲ. ಅವುಗಳಲ್ಲಿ ಅಫ್ಜಲ್ ಗುರು ಅರ್ಜಿಯೂ ಸೇರಿದೆ.
ಈ ಹಿಂದಿನ ರಾಷ್ಟ್ರಪತಿಗಳ ದಾಖಲೆಗಳನ್ನು ಗಮನಿಸಿದರೆ, ಕೆ.ಆರ್. ನಾರಾಯಣನ್ ಅವರು 10ರಲ್ಲಿ ಒಂದು ಪ್ರಕರಣದಲ್ಲಿ ಮಾತ್ರ ಕ್ಷಮಾದಾನ ನೀಡಿದ್ದರು. ಅಬ್ದುಲ್ ಕಲಾಂ 25 ಅರ್ಜಿಗಳಲ್ಲಿ 24ಕ್ಕೆ ಕ್ಷಮಾದಾನ ನೀಡಿದ್ದರು. ಧನಂಜಯ್ ಚಟರ್ಜಿ ಅರ್ಜಿಯನ್ನು ಮಾತ್ರ ಅವರು ತಿರಸ್ಕರಿಸಿದ್ದರು.